Thursday 3 April 2014

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ಬಿರುಸಿನ ತನಿಖೆ ಆರಂಭ


ಬೆಳ್ತಂಗಡಿ, ಏ 2: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿರುಸಿನ ತನಿಖೆ ಆರಂಭಿಸಿದೆ. ಸೌಜನ್ಯ ಕೊಲೆ ಪ್ರಕರಣದ ನಿಜವಾದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಸದ್ಯದಲ್ಲೇ ಬಂಧಿಸಲಿದ್ದಾರೆನ್ನುವ ಬಿಸಿಬಿಸಿ ಚರ್ಚೆ ಬೆಳ್ತಂಗಡಿ ಭಾಗದಲ್ಲಿ ನಡೆಯುತ್ತಿದೆ.

ಚೆನ್ನೈ ನಿಂದ ಬಂದ ಏಳು ಜನರ ಅಧಿಕಾರಿಗಳ ತಂಡ ಜಿಲ್ಲಾ ಪರಿವೀಕ್ಷಣಾ ಮಂದಿರದಲ್ಲಿ (IB) ತಂಗಿದ್ದು, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬದವರನ್ನು ಮತ್ತು ಆರೋಪಿ ಪಟ್ಟಿಯಲ್ಲಿ ದಾಖಲಾಗಿರುವವರನ್ನು ಒಬ್ಬೊಬ್ಬರಾಗಿ ವಿಚಾರಣೆ ನಡೆಸಲಾರಂಭಿಸಿದ್ದಾರೆ.

ಸೌಜನ್ಯ ತಂದೆ, ತಾಯಿ ಕುಸುಮ, ಮಾವ ವಿಠಲ ಪೂಜಾರಿ ಸೇರಿದಂತೆ ಹಲವರನ್ನು ಸಿಬಿಐ ಈಗಾಗಲೇ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದೆ. ತನಿಖಾ ಅಧಿಕಾರಿಗಳ ಜೊತೆ ಜಸ್ಟಿಸ್ ಸುಬ್ರಮಣ್ಯೇಶ್ವರ ರಾವ್ ಕೂಡಾ ಇದ್ದು ಎರಡು ದಿನ ಸಿಬಿಐ ಅಧಿಕಾರಿಗಳು ಆರೋಪಿ ಪಟ್ಟಿಯಲ್ಲಿರುವವರನ್ನು ವಿಚಾರಣೆ ನಡೆಸುವ ವೇಳೆ ಅಧಿಕಾರಿಗಳಿಗೆ ಸಹಕರಿಸಿದ್ದಾರೆ. ಸೌಜನ್ಯ ಶವ ಪತ್ತೆಯಾದ ಜಾಗಕ್ಕೆ ಸಿಬಿಐ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದಾರೆ. ಇದಲ್ಲದೇ, ಈ ಭಾಗದಲ್ಲಿನ 450ಕ್ಕೂ ಹೆಚ್ಚು ಅಸಹಜ ಸಾವು ಪ್ರಕರಣಗಳ ಬಗ್ಗೆ ಕೂಡಾ ಸಿಬಿಐ ತನಿಖೆ ನಡೆಸಲಿದೆ. ಯಾರ ಒತ್ತಾಯಕ್ಕೂ ಮಣಿಯದೆ ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸೌಜನ್ಯಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು, ಹೆತ್ತವರಿಗೆ ನ್ಯಾಯ ಸಿಗಬೇಕು. ಈ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸ ಬೇಕೆಂದು ವಿವಿಧ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. (ಕೇಮಾರು ಶ್ರೀ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿಶೇಷ ಸಂದರ್ಶನ)

ಪ್ರತಿಭಟನೆಯ ಬಿಸಿಗೆ ಕೊನೆಗೂ ಮಣಿದಿದ್ದ ಸರಕಾರ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಕರಣವನ್ನು ಸಿಬಿಐಗೆ ಅಧಿಕೃತವಾಗಿ ವರ್ಗಾಯಿಸಿತ್ತು. ಕಳೆದ ವರ್ಷ ಅಕ್ಟೋಬರ್ 31ರಂದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದರು. 12 ಪುಟಗಳ ತನಿಖಾ ವರದಿಯಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ಯತ್ನ ಹಾಗೂ ಹತ್ಯೆ ಮಾಡಿರೋದು ಆರೋಪಿ ಸಂತೋಷ್ ರಾವ್ ಎಂದು ನಮೂದಿಸಿದ್ದ ಸಿಐಡಿ ಅಧಿಕಾರಿಗಳು ವರದಿಯನ್ನು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ನೀಡಿ, ಪ್ರಕರಣದ ಬಗ್ಗೆ ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸಬಹುದು ಎಂದು ಶಿಫಾರಸು ಮಾಡಿದ್ದರು. ಸಿಐಡಿ ಅಧಿಕಾರಿಗಳು ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನ 12 ಸಾಕ್ಷ್ಯಗಳ ವಿಚಾರಣೆ ಬಳಿಕ ಆರೋಪಿಗಳಾಗಿದ್ದ ನಿಶ್ಚಲ್ ಜೈನ್, ಧೀರಜ್ ಜೈನ್, ಉದಯ್ ಜೈನ್, ಮಲ್ಲಿಕ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು ಮತ್ತು ಪೊಲೀಸರು ಬಂಧಿಸಿರುವ ಆರೋಪಿ ಸಂತೋಷ್ ರಾವ್ ಕೊಲೆ ಮಾಡಿರುವುದು ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಸಿಐಡಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ವಿವಿಧ ಸಂಘಟನೆಗಳು ಮತ್ತು ಸೌಜನ್ಯ ಪೋಷಕರು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೇ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದರು. ನ.3ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ, ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಸಿಐಡಿ ತನಿಖೆ ಮತ್ತು ತನಿಖಾ ವರದಿ ಕುರಿತು ಸ್ಥಳೀಯರ ಮನಸ್ಸಿನಲ್ಲಿ ಇನ್ನೂ ಗೊಂದಲವಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಆಗಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಪತ್ರ ಬರೆದಿದ್ದರು.

Via: One India

No comments:

Post a Comment